ಜೀನಲ್ಲಿ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ
Posted date: 15 Thu, Dec 2016 – 10:25:42 AM

 ಕಿಚ್ಚ ಸುದೀಪ್ ಈಗಾಗಲೇ ಬಿಗ್‌ಬಾಸ್ ಮೂಲಕ ಕಿರುತೆರೆ ವೀಕ್ಷಕರ ಮನವನ್ನು ಗೆದ್ದಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಧಾರವಾಹಿಯೊಂದರ ನಿರ್ಮಾಪಕರೂ ಆಗಿದ್ದಾರೆ.  ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಇದೇ ೧೯ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿರಾತ್ರಿ ೭.೩೦ ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಇದು ಕಿರುತೆರೆ ಧಾರವಾಹಿಯೇ ಆದರೂ ಬಹುತೇಕ ಸಂಖ್ಯೆಯಲ್ಲಿ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಸುದೀಪ್ ಅವರ ಮೇಲಿನ ಅಭಿಮಾನದಿಂದ ಭಾಗವಹಿಸಿದ್ದಾರೆ.  ಹಾಗಾಗಿ ಇದು ಹಲವು ಪ್ರಥಮಗಳಿಗೆ ಕಾರಣವಾಗಿದೆ.
    ನಟಿ ಯಜ್ಞಾಶೇಟ್ಟಿ ಮೊದಲಬಾರಿಗೆ ಸೀರಿಯಲ್‌ವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು, ನಟ ರವಿಚೇತನ್ ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಸೇರಿದಂತೆ ಹಲವಾರು ಕಲಾವಿದರ ಸಂಗಮದಲ್ಲಿ ವಾರಸ್ದಾರ ರಚನೆಯಾಗಿದೆ.  ಈಗಾಗಲೇ ಪ್ಲಸ್, ದ್ಯಾವ್ರೇ ನಂಥ ವಿಭಿನ್ನ ನಿರೂಪಣೆಯ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಗಡ್ಡವಿಜಿ ಈ ಧಾರಾವಾಹಿಯ ಸಾರಥ್ಯ ವಹಿಸಿಕೊಂಡಿದ್ದಾರೆ.  ಈ ದಾರಾವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಡ್ರಾಮಾ ಜ್ಯೂನಿಯರ‍್ಸ್ ಮೂಲಕ ನೋಡುಗರ ಮುದ್ದಿನ ಚಿನಕುರುಳಿಯಾಗಿದ್ದ ೫ ವರ್ಷದ ಚಿತ್ರಾಲಿ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು.  ಸ್ವತ: ಸುದೀಪ್ ಅವರೇ ಈ ಪುಟಾಣಿಯ ಅದ್ಬುತವಾದ ಅಭಿನಯಕ್ಕೆ ಮಾರುಹೋಗಿ ತಮ್ಮ ವಾರಸ್ದಾರ ಧಾರವಾಹಿಯಲ್ಲಿ ಲೀಡ್‌ರೋಲ್‌ಗೆ ಕರೆತಂದಿದ್ದಾರೆ.
    ಶಿವಪುರ ಎಂಬ ಗ್ರಾಮದಲ್ಲಿ ನಡೆಯುವ ಕಥೆಯಿದು ಆ ಗ್ರಾಮದ ಆಡಳಿತದ ಚುಕ್ಕಾಣಿ ವಾರಸ್ಥಾರ ಕುಟುಂಬ ಹಿಂದಿನಿಂದಲೂ ವಹಿಸಿಕೊಂಡು ಬಂದಿರುತ್ತದೆ.  ಇನ್ನು ಆ ಕುಟುಂಬದ ಸೊಸೆ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಸದಸ್ಯರ ಅಸಮಾಧನಾಕ್ಕೆ ಕಾರಣವಾಗಿರುತ್ತದೆ.  ಅಲ್ಲದೆ ದುರುಳ ವ್ಯಕ್ತಿಯೊಬ್ಬ ವಾರಸ್ದಾರ ಪೀಠವನ್ನು ಅಲಂಕರಿಸುವುದಕ್ಕೆ ಕಾರಣವಾಗುತ್ತದೆ.  ಅದನ್ನು ತಪ್ಪಿಸಲು ಅಮ್ಮಾ ಒಂದು ಸುಳ್ಳನ್ನು ಹೇಳುತ್ತಾಳೆ. ಆ ಸುಳ್ಳಿನ ಸುತ್ತ ನಡೆಯುವ ಕಥಾ ಹಂದರವೇ ವಾರಸ್ದಾರ ದ ತಿರುಳು.
ಈಗಾಗಲೇ ಡ್ರಾಮಾ ಜ್ಯೂನಿಯರ‍್ಸ್ ಕಾಮಿಡಿ ಕಿಲಾಡಿಗಳಂಥ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿರುವ ಜೀ ಕನ್ನಡವಾಹಿನಿ ಈಗ
ಮತ್ತೊಂದಿ ವಿಶಿಷ್ಟ ಧಾರವಾಹಿಯನ್ನು ವೀಕ್ಷಕರಿಗೆ ತಂದಿದೆ.  ಈ ಕಥೆಗೆ ಸೂಕ್ತವಾದ ಲೊಕೇಷನ್ ಹುಡುಕಾಟದಲ್ಲಿದ್ದ ತಂಡಕ್ಕೆ ಚಿಕ್ಕಮಗಳೂರು ಸಮೀಪದ ಬೇಗೂರು ಎಂಬ ಕುಗ್ರಾಮ ಸಿಕ್ಕಿದೆ.  ಯಾವುದೇ ಪೋನ್ ಸಂಪರ್ಕವೂ ಇಲ್ಲದ ಗ್ರಾಮ ಬೇಗೂರಿನಲ್ಲಿ ಈಗ ವಾರಸ್ದಾರ ತಂಡ ಬೀಡುಬಿಟ್ಟಿದೆ.  ಇದರ ಬಹುತೇಕ ಚಿತ್ರಣ ಅದೇ ಗ್ರಾಮದಲ್ಲಿ ನಡೆಯುತ್ತಿದೆ.
    ಒಂದು ಸಿನಿಮಾ ರೀತಿಯಲ್ಲೇ ನಿರ್ಮಾಣಗೊಳ್ಳುತ್ತಿರುವ ಈ ಧಾರವಾಹಿಯಲ್ಲಿ ಸಿನಿಮಾ ತಂತ್ರಜ್ಞ ಕಲಾವಿದರೇ ಬಹುತೇಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.  ಕಿಚ್ಚ ಸುದೀಪ್ ಈ ಧಾರವಾಹಿಯ ಮೂಲಕ ಕಿರುತೆರೆ ನಿರ್ಮಾಪಕರೂ ಆಗಿರುವುದು ವೀಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed